ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕೃತ : ಶ್ರೀ ಪಿ. ಗಂಗಾಧರ ಸ್ವಾಮಿ (2006) :

ನಾಡಿನ ಉದ್ದಗಲಕ್ಕೂ ರಂಗತರಬೇತಿ ಕಾರ್ಯಾಗಾರಗಳನ್ನು ಗುಣಾತ್ಮಕವಾಗಿ ಮತ್ತು ಸಂಖ್ಯಾತ್ಮಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಹಿಸಿರುವ ರಂಗಪರಿಚಾರಕ ಪಿ ಗಂಗಾಧರಸ್ವಾಮಿ. ಇವುಗಳಿಂದ ಹೊರಬಂದಿರುವ ನಟರು, ತಂತ್ರಜ್ಞರು, ನಾಟಕಕಾರರ, ಹೊಸ ತಂಡಗಳ ಸಂಖ್ಯೆ ಸಾಕಷ್ಟಿದೆ. ನಿರ್ದೇಶಕರಾಗಿ, ತಂತ್ರಜ್ಞರಾಗಿ ಗಂಗಾಧರಸ್ವಾಮಿ ಪಡೆದುಕೊಂಡಿರುವ ಯಶಸ್ಸಿಗಿಂತ ಕಾರ್ಯಾಗಾರಗಳ ನಿರ್ದೇಶಕರಾಗಿ ಅವರು ಪಡೆದಿರುವ ಯಶಸ್ಸು ಅತ್ಯಂತ ಮಹತ್ವದ್ದು. ರಂಗದ ಅನುಭವವಿಲ್ಲದವರಲ್ಲಿ ರಂಗಾಸಕ್ತಿಯನ್ನು ಮೂಡಿಸುತ್ತ, ಅವರನ್ನು ತಿದ್ದಿ ತೀಡುತ್ತ ರಂಗಕ್ಕೆ ಬೇಕಾದವರನ್ನಾಗಿ ರೂಪಿಸಿದ ಕಷ್ಟದ ಕಾರ್ಯವನ್ನು ಒಂದಿಷ್ಟೂ ಬೇಸರವಿಲ್ಲದೆ, ಎಲ್ಲ ಬಗೆಯ ಸಂಕಷ್ಟಗಳನ್ನು ಎದುರಿಸುತ್ತ ತಾಳ್ಮೆಯಿಂದ ಕಟ್ಟುವ ಕೆಲಸವನ್ನು ಮಾಡಿದ ರಂಗಧೀರರಲ್ಲಿ ಗಂಗಾಧರಸ್ವಾಮಿಯವರದು ಮೊದಲ ಹೆಸರು. ಖ್ಯಾತ ರಂಗಕರ್ಮಿ ಪ್ರಸನ್ನರ ಒಡನಟ ಗಂಗಾಧರಸ್ವಾವಿಯವರನ್ನು ಸಮುದಾಯಕ್ಕೆ ಎಳೆ ತಂದು ರಂಗಬದ್ದತೆ ಮತ್ತು ಸಾಮಾಜಿಕ ಕಳಕಳಿಯ ವ್ಯಕ್ತಿತ್ವವನ್ನು ಒದಗಿಸಿತು. ಅಲ್ಲಿಂದ ಸಮುದಾಯದ ಕಾರ್ಯಕರ್ತರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ಜನಪರ ನಾಟಕಗಳ ಉದಯಕ್ಕೆ ಕಾರಣಕರ್ತರಾದರು.
ಧಾರವಾಡ ಜಿಲ್ಲೆಯ ಸಣ್ಣಹಳ್ಳಿ ಮುಂಡರಗಿಯ ಸಂಪ್ರದಾಯಸ್ಥ ಜಂಗಮ ಮನೆತನದ ಮಹಾಗುಂಡಯ್ಯ ಮತ್ತು ಪಾರ್ವತಮ್ಮ ದಂಪತಿಗಳ ಮಗನಾದ ಗಂಗಾಧರಸ್ವಾಮಿ ಬಡತನದ ಬೇಗುದಿಯನ್ನು ಎಳವೆಯಿಂದಲೂ ಅನುಭವಿಸಿದವರು. ಅಜ್ಜನೂರಾದ ಯಾವಗಲ್ಲಿನಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡ-ಗದುಗಿನಲ್ಲಿ ಪ್ರೌಢಶಿಕ್ಷಣ ಮುಗಿಸಿದ ಗಂಗಾಧರಸ್ವಾಮಿಯವರಿಗೆ ಬಿ ಎಸ್ ಸಿ ಪದವಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಬೆಂಗಳೂರಿನ ಮೆಡಿಕಲ್ ಕಂಪನಿಯಲ್ಲಿ ದುಡಿಮೆ ಪ್ರಾರಂಭಿಸಿ ಅನಾರೋಗ್ಯದ ನಿಮಿತ್ತ ಅದನ್ನೂ ಬಿಟ್ಟರು. ನಂತರ ಸೀರೆ ಮಾರಾಟದಲ್ಲಿ ತೊಡಗಿ ಬೆಂಗಳೂರಿನ ಬೀದಿ-ಬೀದಿ ಸುತ್ತಿದರು. ಒಂದೆರಡು ತಿಂಗಳು ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿಯೂ ಕೆಲಸ ಮಾಡಿದರು. ಅನೇಕ ಸಂದರ್ಭಗಳಲ್ಲಿ ಒಂದೊತ್ತಿನ ಊಟಕ್ಕಾಗಿ ಪರದಾಡಿದ್ದೂ ಸುಳ್ಳೇನಲ್ಲ. ಹಾಗಂತ ಧೈರ್ಯಗುಂದಲಿಲ್ಲ. ಏನನ್ನಾದರೂ ಸಾಧಿಸಬೇಕೆಂಬ ಛಲ, ಬದುಕಿನ ವಿವಿಧ ಆನುಭವಗಳನ್ನು ತಮ್ಮದಾಗಿಸಿಕೊಳ್ಳಬೇಕೆಂಬ ತವಕ ಅವರನ್ನೂ ಭರತನಾಟ್ಯದ ಕಡೆಗೆ ಎಳೆತಂದಿತು. ಸಂಗೀತ ಭಾರತಿಯ ಮುಖ್ಯಸ್ಥರಾದ ಶ್ರೀ ಆರಾಧ್ಯರ ಹತ್ತಿರ ಎರಡು ವರ್ಷ ಭರತನಾಟ್ಯವನ್ನು ಅಭ್ಯಾಸ ಮಾಡಿದರು.
ಸಮುದಾಯದಲ್ಲಿನ ಕ್ರಿಯಾಶೀಲ ಒಡನಾಟ ಮತ್ತು ೧೯೭೮ ರಲ್ಲಿ ಬೆಂಗಳೂರಿನಲ್ಲಿ ಬಾದಲ್ ಸರ್ಕಾರ್ ನಡೆಸಿದ ಮೂರನೆ ರಂಗಭೂಮಿ ಕಾರ್ಯಾಗಾರದಲ್ಲಿ ಪಡೆದ ಅನುಭವ ಅವರಿಗೆ ರಂಗಕಮ್ಮಟಗಳನ್ನು ನಡೆಸಲು ಬೇಕಾದ ಸಾಮರ್ಥ್ಯವನ್ನು ಒದಗಿಸಿಕೊಟ್ಟಿತು. ಉತ್ತರ ಕರ್ನಾಟಕದ ವಿವಿದೆಡೆಗಳಲ್ಲಿ ಸಮುದಾಯದ ಶಾಖೆಯನ್ನು ಪ್ರಾರಂಭಿಸುವ ಹೊಣೆಗಾರಿಕೆಯನ್ನು ಹೊತ್ತ ಗಂಗಾಧರಸ್ವಾಮಿ ಅಲ್ಲೆಲ್ಲ ರಂಗಕಮ್ಮಟಗಳನ್ನು ನಡೆಸಿ ಸಮುದಾಯದ ಶಾಖೆಗಳಿಗೆ ಗಟ್ಟಿಯಾದ ತಳಹದಿಂiನ್ನು ಹಾಕಿದರು. ಧಾರವಾಡ, ಹೊಸಪೇಟೆ, ರಾಯಚೂರು ಮುಂತಾದ ಸ್ಥಳಗಳಲ್ಲಿ ಇವರ ನೇತೃತ್ವದಲ್ಲಿ ಸಮುದಾಯ ಕ್ರಿಯಾಶೀಲವಾಯಿತು. ರಂಗಸಂಸ್ಕೃತಿಯ ಜೊತೆಗೆ ಸಮಾಜಮಖಿಯಾದ ಯುವತಂಡ ಉದಯಿಸಿತು. ಅಲ್ಲದೆ ಹೆಗ್ಗೋಡು, ಬಾಗಲಕೋಟೆ, ಇಲಕಲ್, ಗದಗ, ಗುಲ್ಬರ್ಗ, ಉಡುಪಿ, ಮೈಸೂರು ಮುಂತಾದೆಡೆಗಳಲ್ಲಿ ಹವ್ಯಾಸಿ ತಂಡಗಳಿಗೆ ಕಮ್ಮಟಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಪಂಚಮ, ಮೆರವಣಿಗೆ, ಬೆಳೆದವರು, ಕತ್ತಲೆ ದಾರಿ ದೂರ, ಮಾರೀಚನ ಬಂಧುಗಳು, ಹುತ್ತವ ಬಡಿದರೆ, ಬಿಟ್ಟ ಪಯಣವ ಬಿಡದೆ, ಚಿಕ್ಕದೇವ ಭೂಪ ಮುಂತಾದ ಹಲವು ನಾಟಕಗಳು ಕಮ್ಮಟದ ಫಶೃತಿಯಾಗಿ ಹೊರಹೊಮ್ಮಿದವು. ವೃತ್ತಿ ಕಂಪನಿಯವರಿಗಾಗಿ ಅವರು ನಡೆಸಿರುವ ಕಾರ್ಯಾಗಾರಗಳು ಅತ್ಯಂತ ವಿಶಿಷ್ಟವಾದವು. ರಂಗಶಿಕ್ಷಣದ ಅಗತ್ಯದ ಬಗೆಗೆ iiತನಾಡುವವರೇ ಹೆಚ್ಚು. ಆದರೆ ಆ ಧೈರ್ಯ ಮಾಡುವ ಯತ್ನಗಳು ಕಡಿಮೆ. ಅಂತಹ ಸಾಹಸಕ್ಕೆ ಕೈಯಿಕ್ಕಿದ ಗಂಗಾಧರಸ್ವಾಮಿ ವೃತ್ತಿ ಕಲಾವಿದರಿಂದ ಕದಡಿದ ನೀರು ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಿದರು.
ರಂಗಕಮ್ಮಟಗಳು ಕೇವಲ ರಂಗಕಲೆಯನ್ನು ಪರಿಚಯಿಸುವ ಕಾರ್ಯಾಗಾರಗಳಾಗದೆ ಯುವಜನತೆಯಲ್ಲಿ ಸಮಕಾಲೀನ ಪ್ರಜ್ಞೆಯನ್ನು ಬೆಳೆಸುವ ಸೃಜನಶೀಲ ಮತ್ತು ಸಾಮಾಜಿಕ ಅರಿವನ್ನು ವಿಸ್ತರಿಸುವ ಸಮುದಾಯ ತನ್ನ ಸಮಸ್ಯೆಗಳಿಗೇ ತಾನೇ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನಂಬಿದವರು ಗಂಗಾಧರಸ್ವಾಮಿ. ಸಮಾಜವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ ಪ್ರಯತ್ನವಾಗಿ ರಂಗಕಮ್ಮಟಗಳನ್ನು ಅವರು ಗ್ರಹಿಸುತ್ತಾರೆ.
ಅಲೆದಾಟದಲ್ಲೇ ನಿರತರಾಗಿದ್ದ ಗಂಗಾಧರಸ್ವಾಮಿ ನೆಲೆ ನಿಲ್ಲುವ ಒಂದೆರಡು ಪ್ರಯತ್ನ ಮಾಡಿದ್ದರು. ಬೆಂಗಳೂರಿನ ಆದರ್ಶ ಫಿಂ ಇನ್ಸ್ಟಿಟ್ಯೂಟ್ ನಲ್ಲಿ ಪ್ರಾಧ್ಯಾಪಕರಾಗಿ ಚಲನಚಿತ್ರದಲ್ಲಿ ನಟಿಸುವ ಆಸೆಯುಳ್ಳವರಿಗೆ ನಟನೆಯನ್ನು ಕಲಿಸಿಕೊಟ್ಟರು. ಹೆಗ್ಗೋಡಿನ ನೀನಸಂ ನಾಟಕಶಾಲೆಗೆ ಪ್ರಾರಂಭದ ವರ್ಷಗಳಲ್ಲಿ ಮುಖ್ಯಸ್ಥರಾಗಿದ್ದರು. ಬಿ ವಿ ಕಾರಂತರು ಅವರನ್ನು ಪ್ರಶಿಕ್ಷಕರಾಗಿ ಗುರುತಿಸಿ ರಂಗಾಯಣಕ್ಕೆ ಬರಮಾಡಿಕೊಂಡರು. ರಂಗಾಯಣಕ್ಕಾಗಿ ಅಲೆಗಳಲ್ಲಿ ರಾಜಹಂಸ, ಸಿರಿಸಂಪಿಗೆ, ಪ್ರತಿಶೋಧ ನಾಟಕಗಳನ್ನು ನಿರ್ದೇಶಿಸಿದರು. ಬೀಚಿಯವರ ಸಾಹಿತ್ಯವನ್ನು ಆಧರಿಸಿದ ಅವರ ಇತ್ತೀಚಿನ ನಾಟಕ ಬೀಚಿಬುಲೆಟ್ಸ್ ಅಪಾರ ಜನಪ್ರಿಯತೆಯನ್ನು ಉಳಿಸಿದೆ.ರಂಗಾಯಣದ ಯಶಸ್ವಿ ಪ್ರಯೋಗಗಳ ಹಿಂದಿನ ರಂಗತಾಂತ್ರಿಕತೆ ಗಂಗಾಧರಸ್ವಾಮಿಯವರದ್ದು. ಅದರಲ್ಲೂ ವಿಶೇಷವಾಗಿ ಬೆಳಕಿನ ವಿನ್ಯಾಸ್ಯ ಅವರ ಮೆಚ್ಚಿನ ಕ್ಷೇತ್ರ ರಂಗಾಯಣದ ಮತೋಂದು ಟಿಸಿಲಾದ ಶಿಕ್ಷಣದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಆ ಅಜ್ಜ ಈ ಮೊಮ್ಮಗ ಮಕ್ಕಳ ನಾಟಕವನ್ನು ಹೊಸಪೇಟೆ ಮತ್ತು ಕುಂದಾಪುರಗಳ ತಂಡಕ್ಕೆ ಯಶಸ್ವಿಯಾಗಿ ಎರಡು ಭಿನ್ನ ಶೈಲಿಗಳಲ್ಲಿ ನಿರ್ದೇಶಿಸಿದ್ದಾರೆ. ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ರಂಗಭೂಮಿಗೆ ಸಂಭಂದಿಸಿದ ಪಾಠಗಳನ್ನು ಮಾಡುತ್ತಿದ್ದಾರೆ.ಸಮುದಾಯದ ಕಾರ್ಯದರ್ಶಿಯಾಗಿ ಅವರು ಪಡೆದುಕೊಂಡಿರುವ ಸಂಘಟನಾ ಸಾಮರ್ಥ್ಯ ರಂಗಾಯಣದ ಬಹುರೂಪಿ ಮತ್ತಿತರ ನಾಟಕೋತ್ಸವಗಳಲ್ಲಿ ಫಲಪ್ರದವಾಗಿ ಬಳಸಲ್ಪಡುತ್ತಿದೆ. ರಂಗಾಯಣದ ಯಶೋಗಾಥೆಯಲ್ಲಿ ಗಂಗಾಧರಸ್ವಾಮಿಯರ ಪಾಲು ಬಹಳಷ್ಟಿದೆ.
ಗಂಗಾಧರಸ್ವಾಮಿ ಹವ್ಯಾಸಿ ತಂಡಗಳ ಜೊತೆ ನಿಕಟ ಸಂಪರ್ಕನ್ನಿಟ್ಟುಕೊಂಡವರು. ಅವರ ಹಲವು ನಾಟಕಗಳು ಹವ್ಯಾಸಿ ತಂಡಗಳಿಗೆ ನಾಟಕಗಳಾಗಿವೆ. ಅವುಗಳಲ್ಲಿ - ಹೊಸಪೇಟೆ ಮಾಧ್ಯಮದ ಚೋರ ಚರಣದಾಸ, ಮೈಸೂರಿನ ಅಮರ ಕಲಾಸಂಘದ ಗೌತಮಬುದ್ಧ ಮತ್ತು ಜೈಸಿದ ನಾಯಕ, ಬಾಗಲಕೋಟೆ ಸೃಜನ ವೇದಿಕೆಯ ದೊಡ್ಡಪ್ಪ, ಇಲಕಲ್ಲಿನ ಸ್ನೇಹರಂಗದ ಹಾವುತುಳಿದೇನ ಮಾನನಿ, ಚಾಮರಾಜನಗರದ ಶಾಕುಂತಲಾ ಕಲಾವಿದರ ಆರಹಂತ, ಮೈಸೂರಿನ ಜೆ ಎಸ್ ಎಸ್ ಕಲಾಮಂಟಪದ ಬಸವೇಶ್ವರ ಇತ್ಯಾದಿ ಮುಖ್ಯವಾದವು. ಜಾನಪದ ರಂಗಭೂಮಿ ಅದರಲ್ಲೂ ಮುಖ್ಯವಾಗಿ ದೊಡ್ಡಟದ ವೈಶಿಷ್ಟಗಳನ್ನು ತಮ್ಮ ನಾಟಕಗಳ ಮುಖ್ಯ ದ್ರವ್ಯವನ್ನಾಗಿ ಬಳಸಿಕೊಂಡಿದ್ದಾರೆ. ಅವರ ಈ ಪ್ರಯೋಗಗಳ ಕುರಿತು ಕಾಲಕಾಲಕ್ಕೆ ಬಂದ ಪತ್ರಿಕಾ ವಿಮರ್ಶೆಗಳು ಗಂಗಾಧರಸ್ವಾಮಿಯವರ ಪ್ರತಿಭೆಯನ್ನು ಒರೆಗೆಹಚ್ಚಿ ನೋಡಿವೆ.
ವಿಶಾಲವಾದ ಹಣೆ, ಅರ್ಧ ಬೊಕ್ಕತಲೆ, ಹಿಂದೆ ಸರಿಸಿ ಬಾಚಿದ ಬಿಳಿಕೂದಲು, ದುಂಡನೆಯ ಮುಖದ ತೋರ ಮೈ; ದೊಗಳೆಯಾದ ಉದ್ದದ ಸರಳ ಜುಬ್ಬದಾರಿಯಾದ ಗಂಗಾಧರಸಾಮಿ ರಂಗಭೂಮಿಯ ಯಾವ ಕೆಲಸವನ್ನಾದರೂ ನಿಷ್ಠೆಯಿಂದ ಮಾಡುವ; ಅಸಹನೆ, ಕೋಪಗಳನ್ನು ಅನಗತ್ಯವಾಗಿ ಹರಿಯಬಿಡದಿರುವ; ನಿಧಾನ ಮತ್ತು ತಾಳ್ಮೆಯ ಪ್ರವೃತ್ತಿಯ ಸ್ನೇಹಜೀವಿ.
ರಂಗಭೂಮಿಯನ್ನೇ ಬದುಕಿನ ಆಸರೆಯಾಗಿ ಆರಿಸಿಕೊಂಡಿರುವ ಗಂಗಾಧರಸ್ವಾಮಿಗೆ ಅದರ ಬಗ್ಗೆ ಯಾವ ಬೇಸರವೂ ಇಲ್ಲ, ಆರ್ಥಿಕವಾಗಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರೂ ರಂಗಭೂಮಿ ಒದಗಿಸಿಕೊಟ್ಟಿರುವ ಸಮೄದ್ದ ಅನುಭವಕ್ಕೆ ಅವರು ಋಣಿಯಾಗಿದ್ದಾರೆ.ವ್ಯಾಪಕವಾದ ಕಾರ್ಯಕ್ಷೇತ್ರವನ್ನು ರಂಗಗೆಳೆಯರನ್ನು ಹೊಂದಿರುವ ಗಂಗಾಧರಸ್ವಾಮಿ ತಮ್ಮ ಕೊಡುಗೆ ಅಪಾರ, ಶ್ರೇಷ್ಠ ಎಂದು ಎಂದೂ ಬೀಗಿದವರಲ್ಲ. ಬಂದದ್ದನ್ನು ಬಂದ ಹಾಗೆಯೇ ಸ್ವೀಕರಿಸುವ ಸ್ವಾಭಾವದ ಗಂಗಾಧರಸ್ವಾಮಿ ಬೆಳೆಯುವವರಿಗೆಲ್ಲ ಅಣ್ಣನಾಗಿ,ಬೆಳೆದವರಿಗೆ ತಮ್ಮನಾಗಿ ತನ್ನ ರಂಗಕೈಂಕರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಲಿರುವ ಕಷ್ಟಸಹಿಷ್ಣು ಸಹೃದಯಿ.
ಬಿ ವಿ ಕಾರಂತ, ಪ್ರಸನ್ನ, ಚಿದಂಬರರಾವ್ ಜಂಬೆ, ಸಿಜಿಕೆ, ಬಸವಲಿಂಗಯ್ಯ ಮುಂತಾದ ಕನ್ನಡದ ರಂಗದಿಗ್ಗಜರೊಂದಿಗೆ ಆತ್ಮೀಯ ಒಡನಾಟವನ್ನು;ಹೊರಗಿನ ರಂಗತಜ್ಞರೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಶ್ರೀಮಂತಿಕೆಯನ್ನು ಗಂಗಾಧರಸ್ವಾಮಿ ಹೊಂದಿದ್ದಾರೆ. ೧೯೬೩ರಲ್ಲಿ ನಾಟಕ ಅಕಾಡೆಮಿ ಗಂಗಾಧರಸ್ವಾಮಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸನ್ನ, ಸಿಜಿಕೆಯ ನಂತರ ಇದೀಗ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಶ್ರೀ ಶಿವಕುಮಾರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ನಿಜಕ್ಕೂ ಗಂಗಾಧರಸ್ವಾಮಿಯವರ ರಂಗಕಾಯಕಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS